ಚಿಂತ್ಯಾಕೆ ಮಾಡುತಿದ್ದಿ - Chinthyake Madutiddi

|| ಹರಿ ಭಜನೆ ||




ಚಿಂತ್ಯಾಕೆ ಮಾಡುತಿದ್ದಿ ಚಿನ್ಮಯನಿದ್ದಾನೆ||ಪ||

ಚಿಂತಾರತ್ನವೆಂಬೋ ಅನಂತನಿದ್ದಾನೆ ಪ್ರಾಣಿ||ಅ.ಪ||


ಎಳ್ಳು ಮೊನೆಯ ಮುಳ್ಳು ಕೊನೆಯ

ಪೊಳ್ಳು ಬಿಡದೆ ಒಳಗೆ ಹೊರಗೆ

ಎಲ್ಲ ಠಾವಿನಲ್ಲಿ ಲಕುಮಿ ನಲ್ಲನಿದ್ದಾನೆ ಪ್ರಾಣಿ || ೧ ||


ಗೋಪ್ತಾ ತ್ರಿಜಗದ್  ವ್ಯಾಪ್ತಾ

ಭಜಕರ ಆಪ್ತನೆನಿಸಿ ಸ್ತಂಭದಲ್ಲಿ

ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೆ ಪ್ರಾಣಿ || ೨ ||


ಹಿಂದೆ ನಿನ್ನ ಸಲಹಿದರ‍್ಯಾರೋ

ಮುಂದೆ ನಿನ್ನ ಕೊಲ್ಲುವರ‍್ಯಾರೋ

ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೆ ಪ್ರಾಣಿ || ೩ ||


ಮುಕ್ಕಣ ದೇವರ್ಕಳಿಗೆ ಸಿಕ್ಕಿದ್ದ ಸೆರೆಯನ್ನು ಪರಿದು

ಚಿಕ್ಕವಂಗೆ ಅಚಲಪದವಿಯ ದಕ್ಕಿಸಿದ್ದಾನೆ ಪ್ರಾಣಿ || ೪ ||


ನಾನು ನನ್ನದು ಎಂಬುದು ಬಿಟ್ಟು

ಹೀನ ವಿಷಯಂಗಳನ್ನು ಜರಿದು

ಜ್ಞಾನಗಮ್ಯ ಕಾಯೋ ಎನಲು ಪೂರ್ಣನಿದ್ದಾನೆ ಪ್ರಾಣಿ||೫||


ಸುತ್ತಲು ಬಂದು ದುರಿತಗಳೆಲ್ಲ ಕತ್ತರಿಸಿ ಕಡಿದು ಹಾಕುವ

ಹೆತ್ತ ತಾಯಿತಂದೆ ತವರು ಹತ್ತಿರ ಇದ್ದಾನೆ ಪ್ರಾಣಿ || ೬ ||


ಬಲ್ಲಿದ ಭಜಕರ ಹೃದಯದಲ್ಲಿ ನಿಂತು ಶ್ರೀಪುರಂದರ ವಿಠಲ

ಸೊಲ್ಲು ಸೊಲ್ಲಿಗವರ ಬಯಕೆ ಸಲ್ಲಿಸುತ್ತಿದ್ದಾನೆ ಪ್ರಾಣಿ||೭||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು