|| ಶ್ರೀ ಶಂಕರಾಚಾರ್ಯ ಸ್ತುತಿ ||
ಶ್ರೀಮಚ್ಛಂಕರ ಭಗವತ್ಪಾದರ
ಕೋಮಲ ಪದಗಳಿಗೆರಗುವೆವು
ಆ ಮಹಿಮರ ಪರಮಾನುಗ್ರಹದಿಂ
ತಾಮಸವಳಿಯಲು ಭಜಿಸುವೆವು ||೧||
ಧರೆಯೊಳು ದುರ್ಮತಗಳ ದೆಸೆಯಿಂದಲಿ
ನರಜನವು ಕ್ಷೀಣಿಸುತಿರಲು
ಸುರತತಿ ಮೊರೆಯಿಡೆ ಶಿವಗುರು
ಸುರನಾಗಿರಲು ಬ೦ದ ಶಿವನಾಗಿರುವ ||೨||
ಕಾಲಟಿ ಗ್ರಾಮದಿ ಪೂರ್ಣೆಯ ತೀರದಿ
ಕಾಲಧ್ವಂಸಿಯು ಅವತರಿಸೆ
ಎಲ್ಲೆಡೆ ಹಬ್ಬಿತು ಶಾಂತಿಯು
ಸುಜನರಿಗೆಲ್ಲರಿಗಾಯಿತು ಸಂತಸವು ||೩||
ಹಳೆಯ ಪಾಠಗಳನೋದಿದ ಮಾತ್ರದಿ
ತಿಳಿದುಕೊಳ್ಳುವಾ ರೀತಿಯಲಿ
ಎಳೆಯತನದೊಳಗೆ ಕಲೆಗಳನೆಲ್ಲವ
ತಿಳಿದು ಮಹಿಮೆಯನು ತೋರಿಸಿದ ||೪||
ಗತಿಯಿಲ್ಲದೆ ನೆಲ್ಲಿಯ ಕಾಯೊಂದನು
ಹಿತದಿ ಭಿಕ್ಷವಿಡೆ ಕರುಣದೊಳಾ-
ಸತಿಗೆ ಸುವರ್ಣದ ನೆಲ್ಲಿಯಿತ್ತು ಚಿತ್
ಸ್ಠಿತಿಯೊಳಗಾಕೆಯ ನಿಲ್ಲಿಸಿದ ||೫||
ಮುದುಕಿಯಾದ ತಾಯಾರ್ಯಾಂಬಿಕೆ ತಾಂ
ನದಿಗೆ ಹೋಗುವುದಕಾಗದಿರೆ
ನದಿಯನೆ ಮನೆಯ ಸಮೀಪಕೆ ತಿರುಗಿಸಿ
ಮುದದಿಂ ತಾಯಿಗೆ ವಂದಿಸಿದ ||೬||
ಜನಪನ-ನಾಟಕಗಳ ತಾ ಲಾಲಿಸಿ
ಮನದೊಳು ಸಂತಸವನು ತಳೆದು
ಜನಪಾಲಕನಿಷ್ಟಾರ್ಥವನರಿಯು
ತ್ತನುರೂಪದ ತನಯನನಿತ್ತ ||೭||
ನದಿಯಿಂ ಕೃಷ್ಣನ ಮೂರ್ತಿ
ಚಲಿಸುತಿರಲದ ಕಂಡಾದರದಿಂದದನು
ಪದುಳವಾಗಲಾ ತಾಯ ಮನಸ್ಸಿಗೆ
ಮುದದಿಂ ಮನೆಯೊಳು ಸ್ಥಾಪಿಸಿದ ||೮||
ಕ್ಷಿತಿಯುದ್ಧಾರವ ಮಾಡಿ ಮತ್ತೆ
ಸದ್ಗತಿಯನು ಸಂಪಾದಿಸುವುದಕೆ
ಯತಿಪದವುತ್ತಮವೆಂಬುದ ತೋರಲು
ಯತಿಧರ್ಮವನನು ವರ್ತಿಸಿದ ||೯||
ನಾರಾಯಣ ಪರಮೇಷ್ಠಿ ವಸಿಷ್ಠರು
ಸೇರಿ ಬಂದ ಗುರುಕುಲದೊಳಗೆ
ರಾರಾಜಿಪ ಗೋವಿಂದಯತೀಂದ್ರರ
ಸೇರಿ ಶಿಷ್ಯರೆಂದೆನಿಸಿರ್ದ ||೧0||
ಉಕ್ಕಿಬರಲು ನರ್ಮದೆ ಜನರೆಲ್ಲರು
ಸಿಕ್ಕಿರೆ ಕಷ್ಟದೊಳದ ನೋಡಿ
ಗಕ್ಕನೆ ತಮ್ಮ ಕಮಂಡಲದೊಳಗದನಿಕ್ಕಿ
ಮಹಿಮೆಯನು ತೋರಿಸಿದ ||೧೧||
ಗುರುಪರಂಪರಾ ಪ್ರಾಪ್ತವಾಗಿ
ಬಂದಿರುತ ಮೆರೆವ ಶಶಿಶೇಖರನ
ವರದ ರತ್ನ ಗರ್ಭಾಭಿದಗಣಪನ
ಪರಮ ಪ್ರೀತಿಯಿಂದರ್ಚಿಸಿದ ||೧೨||
ಶರಿರಕೆ ಹೊರತಹ ಚೈತನ್ಯವೆ ತನ್ನಿ-
ರವೆಂದರಿತಂತ್ಯಜನನ್ನು
ಗುರುವೆನ್ನುತ ತಾನರಿದಿಹ
ನಿಷ್ಠಾಭರದಿಂ ಶಿವನನು ಮೆಚ್ಚಿಸಿದ ||೧೩||
ಉರು ಸಂಸಾರಾರ್ಣವವನು ದಾಟಿಪ
ಗುರುವಿಗೆ ನದಿಯೆಷ್ಪರದೆನುತ
ನೆರೆಬಂದ ಸನಂದರನು ಪದ್ಮಪಾದರ
ಗೈಯುತ ಕಡೆ ಹಾಯಿಸಿದ ||೧೪||
ವ್ಯಾಸರು ಸಾಕ್ಷಾದ್ದರ್ಶನವನು
ಕೊಟ್ಟಾ ಸಮಯದಿ ಸಿದ್ಧಾಂತವನು
ಭಾಸುರಮಾದೀ ಶಾಂಕರ ಭಾಷ್ಯವ
ಲೇಸಾಗಿಹುದೆನೆ ರಚಿಸಿರುವ ||೧೫||
ಮಂಡನಮಿಶ್ರರ ಕರ್ಮ ಜಡತ್ವವ
ಖಂಡಿಸಿ ತತ್ತ್ವಜ್ಞಾನವನು
ತಂಡತಂಡದಾಧಾರಗಳಿಂ
ಭೂಮಂಡಲವರಿಯಲು ಸಾಧಿಸಿದ ||೧೬||
ನೆರೆ ದೂರ್ವಾಸರ ನೋಡೆ ನಕ್ಕುದಕೆ
ನರಳಾಗಿರ್ದುದ ತಾ ಕಳೆದು
ವರಭಾರತಿಯನ್ನಾ ಶೃ೦ಗೇರಿಯೊಳಿರು-
ವಂತೊಲವಿಂದೊಪ್ಪಿಸಿದ ||೧೭||
ಕಾಪಾಲಿಕ ಜನರಳುಕುವಂತೆ ತಾಂ
ಕೋಪಾವಿಷ್ಟ ನೃಸಿಂಹನನು
ಆ ಪದ್ಮಪಾದಾಭಿದರೊಳು ತೋರಿಸಿ
ಪಾಪಾಚರಣೆಯ ನಿಲ್ಲಿಸಿದ ||೧೮||
ನೀನಾರೆನಲಾ ಮೂಕನು ಆಗಲೆ
ಕಾಣುವ ಹಸ್ತಾಮಲಕದವೊಲ್
ತಾನಾ ಬ್ರಹ್ಮಣೆನಲು ದರ್ಶನದಿಂದೇ -
ನಹುದೆಂಬುದ ತೋರಿಸಿದ ||೧೯||
ಮುಖಸಂದರ್ಶನವಾಗುತ್ತಲೆ ಆ
ಸುಖದಿಂ ತೋಟಕ ವೃತ್ತದೊಳು
ಪ್ರಕಟವಾಗಿ ನುತಿಗೈದವರಿಗೆ ತಾಂ
ತೋಟಕರೆನುತಾಶ್ರಯವನು ಕೊಟ್ಟ ||೨೦||
ತಾಯಿಯು ತನ್ನನು ನೆನೆವಳೆಂದು
ಬಂದಾ ಯತಿ ಸಂಸ್ಕಾರವ ತಾನು
ತಾಯಿಗೆ ಸಲ್ಲಿಸಿ ವಿಶೇಷಾದರದಿ
ತಾಯ ಋಣವ ತಾ ತೀರಿಸಿದ ||೨೧||
ಕಾಮಾಕ್ಷೀ ದೇವಾಲಯದೊಳಗತಿ
ನೇಮದಿಂದ ಶ್ರೀಚಕ್ರವನು
ಪ್ರೇಮದಿ ನೆಲೆಗೊಳಿಸುತ್ತಾ ಶಾಕ್ತರ
ತಾಮಸವಳಿಯಲು ಬೋಧಿಸಿದ ||೨೨||
ಜನರು ಸಂಕುಚಿತ ಬುದ್ಧಿಯುಪಾಸನೆಯನು
ಬಿಡುವಂತುಪದೇಶಿಸುತ
ಅನುವಿಂ ಷಣ್ಮತಗಳ ಸಂಸ್ಥಾಪಿಸಿ
ಘನತರವಹ ಕೀರ್ತಿಯ ಪಡೆದ ||೨೩||
ಭರತ ಖಂಡದಾದ್ಯಂತವ
ಧರ್ಮೋದ್ಧರಣೆಗಾಗಿಯೆ ತಿರುತಿರುಗಿ
ಪರಮಾರ್ಥವನಾ ಜನಸಮುದಾಯಕೆ
ಪರಿಪರಿಯಿಂದಲಿ ಬೋಧಿಸಿದ ||೨೪||
ರಾಜರಿಗೆಲ್ಲರಿಗಾ ಸಿದ್ಧಾಂತದ
ನೈಜಾರ್ಥವ ಮನಗಾಣಿಸುತ
ರಾಜ ರಾಜ ಕೋಟೀ ರತ್ನ
ನೀರಾಜಿತ ಪದಯುಗನಾಗಿರುವ ||೨೫||
ವೇದವೆಂಬ ಪಾಲ್ಗಡಲನು ಕಡೆಯುತ
ಸಾಧಿಸಿ ಅದ್ವೈತಾಮೃತವ
ಮೋದದಿ ಕೊಡುತಾ ಶಿಷ್ಕಸಮೂಹದ
ಖೇದವ ನಿರ್ಮೂಲವ ಗೈದ ||೨೬||
ಜೀವಬ್ರಹ್ಮರಿಗೈಕ್ಯವ ಸಾಧಿಸಿ
ಜೀವತ್ವದ ಬಿಡುಗಡೆಗಾಗಿ
ಸಾವಿರಾರು ಸಾಧನಗಳ ವಿವರಿಸಿ
ಜೀವರ ದುಃಖವ ತೊಲಗಿಸಿದ ||೨೭||
ಬ್ರಹ್ಮವೊಂದೆ ಸೃಷ್ಟಿಗೆ ಮೊದಲು
ಬ್ರಹ್ಮವೊಂದೆ ಸತ್ ಎನಿಸುವುದು
ಬ್ರಹ್ಮವೊಂದೆ ಸರ್ವಾಧಾರವೆನುತ
ಬ್ರಹ್ಮಲಕ್ಷಣವ ವಿವರಿಸಿದ ||೨೮||
ಹಾವಿನ ರೂಪವು ಹಗ್ಗದಿ ತೋರುವ
ಭಾವದಂತೆಯೇ ಈ ಜಗವು
ಭಾವಿಸಲಾ ಬ್ರಹ್ಮದಿ ತೋರುವುದೆಂಬೀ -
ವಿವರವ ಮನಗಾಣಿಸಿದ ||೨೯||
ತೋರುತಿರುವೀ ನಾಮರೂಪಗಳು
ತೋರುತ್ತಿರಲಿಲ್ಲವು ಮೊದಲು
ತೋರದೆ ಪೋಪವು ಮುಂದೆಯು ಅವುಗಳ
ಸಾರವಿದೆಂಬುದ ತೋರಿಸಿದ ||೩೦||
ಭ್ರಾಂತಿಗೆ ಕಾರಣ ಮಾಯೆಯೆನಿಪುದ -
ದನಂತರಂಗದಿದೋಡಿಸಲು
ಸಂತತವುಂ ಬ್ರಹ್ಮನ ಭಜಿಸೆನ್ನುತ
ಸಂತಸದಿ೦ ಜನರಿಗೆ ಪೇಳ್ದ ||೩೧||
ಸುಲಭ ಶೈಲಿಯಿಂ ಪಾಮರ ಜನರುಂ
ಬಲಿದ ವಿಷಯದಿಂ ಪಂಡಿತರುಂ
ತಲೆದೂಗುತ ಮುಳುಗಲು ಗ್ರಂಥಂಗಳ
ಜಲಧಿಯೊಳ್ ಪೊಸತೆನೆ ನಿರ್ಮಿಸಿದ ||೩೨||
ಬಡಗಣ ಬದರಿಯೊಳಂತೆಯೆ ತೆಂಕಣ
ಎಡೆಯೊಳಗಾ ಶೃಂಗೇರಿಯೊಳು
ಪಡುವಣ ದ್ವಾರಕೆ ಮೂಡಣ ಪುರಿಯೊಳು
ತಡೆಯದೆ ಮಠಗಳ ಸ್ಥಾಪಿಸಿದ || ೩೩ ||
ಧರ್ಮಮಂಟಪಕೆ ನಾಲ್ಕುಸ್ತಂಭಗಳು
ಪೆರ್ಮೆಯಂತೆ ನಾಲ್ದೆಸೆಯಲ್ಲಿ
ಧರ್ಮದ ಶಿಕ್ಷೆಯೊಳ್ ನಾಲ್ಕು ಮಠಂಗಳ
ನಿರ್ಮಿಸಿ ಧರ್ಮವ ರಕ್ಷಿಸಿದ || ೩೪||
ಉತ್ತರದಲಕಾನಂದಾ ತಟದಲಿ
ಜ್ಯೋತಿರ್ಮಠದಲಿ ತಾ ನೆಲಸಿ
ಉತ್ತಮವಾದದ್ದೆ ಚತದ ಬೀಜವ
ಬಿತ್ತಿದರೆಲ್ಲೆಡೆ ತೋಟಕರು || ೩೫ ||
ಗುರುವಾಣತಿಯೊಳು ಹಸ್ತಾಮಲಕರು
ಪುರಿ ಗೋವರ್ಧನ ಪೀಠವನು
ಆರೋಹಿಸುತದದ್ವೆತದ ಧರ್ಮದ
ಸಾರವನೆಲ್ಲೆಡೆ ಸಾರಿದರು || ೩೬ ||
0 ಕಾಮೆಂಟ್ಗಳು