ಅಂತರಂಗದ ಕದವು ತೆರೆಯಿತಿಂದು- Antharangada Kadavu Thereyithindu

|| ಹರಿ ಸ್ತುತಿ ||




ಅಂತರಂಗದ ಕದವು ತೆರೆಯಿತಿಂದು ||ಪ||

ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತು ಎನಗೆ ||ಅ|


ಏಸುದಿನವಾಯಿತೊ ಬೀಗಮುದ್ರೆಯ ಮಾಡಿ

ವಾಸವಾಗಿದ್ದರೋ ದುರುಳರಿಲ್ಲಿ

ಮೋಸವಾಯಿತು ಇಂದಿನ ತನಕ ತಮಸಿನ

ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧||


ಹರಿಕರುಣವೆಂಬಂಥ ಕೀಲಿಕೈ ದೊರಕಿತು

ಗುರುಕರುಣವೆಂಬಂಥ ಶಕ್ತಿಯಿಂದ

ಪರಮಭಾಗವತರ ಸಹವಾಸದಲಿ ಪೋಗಿ

ಹರಿಸ್ಮರಣೆಯಿಂದಲಿ ಬೀಗಮುದ್ರೆಯ ತೆಗೆದೆ ||೨||


ಸುತ್ತಲಿದ್ದವರು ಪಲಾಯನವಾದರು

ಭಕ್ತಿಕಕ್ಕಡವೆಂಬ ಜ್ಞಾನದೀಪ

ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ

ಎತ್ತನೋಡಿದರತ್ತ ಶೃಂಗಾರ ಸದನ ||೩||


ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು

ಪರ ದಾರಿಗೆ ಪ್ರಾಣ ಜಯವಿಜಯರು

ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ

ಸರಸಿಜನಾಭನ ಅರಮನೆಯ ಸೊಬಗು ||೪||


ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ

ರಮೆಧರೆಯರಿಂದಲಾಲಿಂಗತ್ವದಿ

ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ-

ಕಮಲದೊಳಗಿರುವ ಶ್ರೀ ವಿಜಯವಿಠಲನ ಕಂಡೆ ||೫||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು