ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು - Ninna Olumeyinda Nikhila Janaru Bandu

|| ಹರಿ ಸ್ತುತಿ ||

ರಚನೆ : ಶ್ರೀ ವಿಜಯ ದಾಸರು




ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು

ಮನ್ನಿಸುವರೊ ಮಹರಾಯ

ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ

ನಿನ್ನದೆ ಸಕಲ ಸಂಪತ್ತು


ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು

ತಬ್ಬಿಬ್ಬುಗೊಂಡನೊ ಹಿಂದೆ

ನಿಬ್ಬರದಿಂದಲಿ ಸರ್ವರ ಕೂಡುಂಬೊ

ಹಬ್ಬವನುಣಿಸುವಿ ಹರಿಯೆ ||1||


ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ

ಗಂಜಿ ಕಾಣದೆ ಬಳಲಿದೆನೋ

ವ್ಯಂಜನ ಮೊದಲಾದ ನಾನಾ ರಸಂಗಳು

ಭುಂಜಿಸುವುದು ಮತ್ತೇನೊ ||2||


ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ

ಊರ್ಣ ವಿಚಿತ್ರ ಸುವಸನ

ವರ್ಣವರ್ಣದಿಂದ ಬಾಹೋದದೇನೊ ಸಂ

ಪೂರ್ಣಗುಣಾರ್ಣವ ದೇವ ||3||


ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ

ಚಾಚಿದೆ ನೊಸಲ ಹಸ್ತಗಳ

ಯೋಚಿಸಿ ನೋಡಲು ಸೋಜಿಗವಾಗಿದೆ

ವಾಚಕ್ಕೆ ನಿಲುಕದು ಹರಿಯೆ ||4||


ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ

ಮೆದ್ದೆನೆಂದರೆ ಈಯಗಾಣೆ

ಈ ಧರೆಯೊಳಗೆ ಸತ್ಪಾತ್ರ ಕೂಡುಂಬೊ

ಪದ್ಧತಿ ನೋಡೊ ಪುಣ್ಯಾತ್ಮ ||5||


ಮನೆ ಮನೆ ತಿರಿದರು ಕಾಸು ಪುಟ್ಟದೆ ಸು

ಮ್ಮನೆ ಚಾಲ್ವರಿದು ಬಳಲಿದೆನೊ

ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ

ತಾನೆ ಪ್ರಾಪ್ತಿ ನೋಡೊ ಜೀಯಾ ||6||


ವೈದಿಕ ಪದವಿಯನೀವಗೆ ಲೌಕಿಕ

ಐದಿಸುವುದು ಬಹು ಖ್ಯಾತೆ

ಮೈದುನಗೊಲಿದ ಶ್ರೀ ವಿಜಯವಿಠ್ಠಲನ ನಿನ್ನ

ಪಾದಸಾಕ್ಷಿಯನುಭವವೊ ||7||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು