ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು - Enna Bhinnapa Kelu Dhanwanthri Daya Madu

|| ಧನ್ವಂತರಿ ಸ್ತುತಿ ||





ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು

ಸಣ್ಣವನು ಇವ ಕೇವಲ |

ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ

ಚೆನ್ನಾಗಿ ಪಾಲಿಸುವುದು ಕರುಣಿ ||ಪ||


ಆರೋಗ್ಯ ಆಯುಶ್ಯ ಐಶ್ವರ್ಯವೆಂಬೋ

ಈ ಮೂರುವಿಧ ವಸ್ತುಗಳು

ನಾರಾಯಣನ ಭಜಕರಾದವರ

ಸಾಧನಕೆ ಪೂರ್ಣವಾಗಿಪ್ಪುವು

ಘೋರ ವ್ಯಭಿಚಾರ ಪರನಿಂದೆ ಪರ

ವಿತ್ತಾಪಹಾರ ಮಾಡಿದ ದೋಷದಿ

ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು

ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೇ ||೧||


ವಸುಮತಿಯ ಮೇಲಿನ್ನು ಅಸುರ ಜನರ ಬಹಳ

ವಶವಲ್ಲ ಕಲಿಯ ಬಾಧೆ

ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಲು ನಾವಿಪ್ಪೆವು

ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು

ಕುಶಲದಿ ಪಾಲಿಸುವುದು

ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು

ಅಸುನಾಥ ಹರಿಯೇ ಪೊರೆಯೋ ಸ್ವಾಮಿ ||೨||


ಆದಿವ್ಯಾಧಿಗಳು ಉನ್ಮಾದ ವಿಭ್ರಮ

ನಾನಾ ಬಾಧೆಗೌಷಧವು ನೀನೆ

ಹೇ ದೇವ ನಿನ್ನ ಕರಕಲಶ ಸುಧೆಗರೆದು

ಸಾಧುಗಳ ಸಂತೈಸುವಿ

ಮೋದಬಡಿಸುವಿ ನಿನ್ನ ಸಾಧಿಸುವರಿಗೆ

ಶುಭೋದಯಂಗಳನಿವೀ

ಆದರಿಸಿ ಇವಗೆ ತವಪಾದ ಧ್ಯಾನವನಿತ್ತು

ಸಾಧುಗಲೊಳಗಿತ್ತು ಮೋದಕೊಡು ಸರ್ವದಾ ||೩||


ಆನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ

ನಿನ್ನವರನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ

ಅನ್ನ ಆರೋಗ್ಯಕ್ಕೆ ಅಲ್ಪ ಜೀವಿಗಳಿಗೆ ಇನ್ನು ಆಲ್ಪರಿಯಬೇಕೆ

ನಿನ್ನ ಸಂಕಲ್ಪ ಭಕ್ತರ ಪೋಷಕನೆಂಬ

ಘನ್ನ ಬಿರುದಿನ್ನು ಉಲುಹೊ ಸಲಹೊ ||೪||


ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು

ನಿನ್ನವನೆಂದು ಅರಿದು

ನಿನ್ನ ನಾ ಪ್ರಾರ್ಥಿಸಿದ ಅನ್ಯರಿಗೆ ಅಲ್ಪರಿಯೆ

ಎನ್ನ ಪಾಲಿಸುವ ದೊರೆಯೆ

ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು

ಮನ್ನಿಸ ಬೇಕು ಕರುಣಿ

ಅನಂತ ಗುಣಪೂರ್ಣ ಗೋಪಾಲವಿಠಲ ಇನ್ನಿದನೆ

ಪಾಲಿಸುವುದೋ ಪ್ರಭುವೇ ||೫||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು