ಆರು ಬಲ್ಲರು ಹರಿಹರಾದಿಗಳ ಮಹಿಮೆಯನು - Aru Ballaru Hariharadigala Mahimeyanu

|| ಹರಿ ಭಜನೆ ||



ಆರು ಬಲ್ಲರು ಹರಿಹರಾದಿಗಳ ಮಹಿಮೆಯನು

ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲ ||ಪ||


ಪೌರತ್ರಯವ ಗೆಲ್ವ ಸಮಯದಲಿ ತಪ ಮಾಡಿ

ನಾರಾಯಣಾಸ್ತ್ರವನು ಆರು ಬಲ್ಲರು

ಗೌರೀಮನೋಹರನ ಘನತರಾರ್ಚನೆಗೈದು

ಚಾರುತರ ಚಕ್ರವನು ಪಡೆದನಾ ಶೌರಿ ||೧||


ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ 

ಗಿಲ ಕಾಯ್ದನಚ್ಯುತನು ಅನುಗಾಲದಿ 

ಬಲು ಭುಜನು ಬಾಣಾಸುರನ ಗೃಹ ದ್ವಾರವನು

ಬಳಸಿ ಕಾಯ್ದನು ಹರನು ವರವ ತಾನಿತ್ತು ||೨||


ಭೋಗಿಶಯನನು ಆಗಿ ಭೋಗಿಭೂಷಣನಾಗಿ

ವಾಗೀಶನಾಗಿ ಸೃಷ್ಟಿ ಸ್ಥಿತಿಲಯ 

ಕ್ಕಾಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ

ಕಾಗಿನೆಲೆಯಾದಿ ಕೇಶವನ ಮಹಿಮೆಯನು ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು