ದತ್ತ ಭಜನೆ - ಅಮರ ವರ್ಗಕೆ ಅಭಯ ಸಾರಿದಿ

|| ದತ್ತ ಭಜನೆ ||



ಅಮರ ವರ್ಗಕೆ ಅಭಯ ಸಾರಿದಿ

ಮೂಲ ಸದ್ಗುರು ಪೀಠ ನಿಲಿಸಿದಿ |

ಅನಸೂಯಾ ಸುತಾ ನೀ ತ್ರಿಮೂರುತಿ

ಅತ್ರಿನಂದನಾ ದತ್ತ ಮೂರುತಿ ||


ಪಿಠಾಪುರದೊಳು ಮೈಯ್ಯ ತೋರ್ದವ

ಕುರುವಪುರದೊಳು ನೆಲಸಿನಿಂತವ |

ಯೋಗಿರಾಜ ಶ್ರೀಪಾದ ಗುರುಪತೀ

ಅತ್ರಿನಂದನಾ ದತ್ತ ಮೂರುತಿ ||


ಅಂಬೆ ಮಾಧವ ತನಯ ನರಹರೀ

ಕ್ಷೇತ್ರ ನಿನ್ನದು ಗಾಣಗಾಪುರೀ |

ಯತಿಪತೀ ನರಸಿಂಹಸರಸ್ವತೀ

ಅತ್ರಿನಂದನಾ ದತ್ತ ಮೂರುತಿ ||


ರಾಯರಂಕರು ನಿನ್ನ ದಾಸರು

ಬಡವ ಬಲ್ಲಿದರೆಲ್ಲ ಭಕ್ತರು |

ಸರ್ವಶಕ್ತ ನೀ ಜ್ಞಾನಿಕುಲಪತೀ

ಅತ್ರಿನಂದನಾ ದತ್ತ ಮೂರುತಿ ||


ನಿನ್ನ ಚರಿತೆಯೂ ವೇದ ಸಮಬಲ

ನಿನ್ನುಪಾಸನಾ ಸುಖದ ಸವಿ ಫಲಾ |

ಸರ್ವಜನರಿಗೂ ನೀನೆ ಸದ್ಗತಿ

ಅತ್ರಿನಂದನಾ ದತ್ತ ಮೂರುತಿ ||


ಯೋಗಿ ವೇಷವೋ ಭೋಗಿ ವೇಷವೋ

ಕಂಡ ಭಕ್ತರದೆಂಥ ಭಾಗ್ಯವೋ |

ಮನಕೆನಿಲುಕದಾ ಮಧುರಮಯಚಿತೀ

ಅತ್ರಿನಂದನಾ ದತ್ತ ಮೂರುತಿ ||


ಆರು ಕೈಗಳು ಮೂರು ಮಸ್ತಕ

ಎರಡು ಕೈಗಳು ಒಂದೆಯೇ ಮುಖಾ |

ತ್ರಿಗುಣದೆರಕನೀ ವಿಶ್ವದಾಕೃತೀ

ಅತ್ರಿನಂದನಾ ದತ್ತ ಮೂರುತಿ ||


ಕರ್ಮವೆಲ್ಲವೂ ನಿನ್ನುಪಾಸನಾ

ಭೋಗವೆಲ್ಲವೂ ನಿನ್ನಭಾವನಾ |

ನೀಡು ನಿನ್ನೊಳು ಏಕರಸಮತಿ

ಅತ್ರಿನಂದನಾ ದತ್ತ ಮೂರುತಿ ||


ಒಂದರೆಕ್ಷಣಾ ನಿತ್ಯ ಸ್ಮರಣೆಯಾ

ಗೈವಭಾವಿಕಾ ನಿತ್ಯನಿರ್ಭಯ |

ಸೊಲ್ಲು ಸೊಲ್ಲಿಗೂ ನಿನ್ನಕೀರುತೀ

ಹಾಡಿಕೊಳ್ಳಲಿ ಯೋಗೀಶ ಭಾರತೀ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು