|| ಶ್ರೀ ಬಿಂದುಮಾಧವ ಸ್ತುತಿ ||
![]() |
| kannadabhajanlyrics.blogspot.com |
ಹೇ ದಯಾಘನ ಸ್ವಾಮಿ ಬಿಂದುವೆ
ನಮಗೆ ಬೇಕಿದೆ ನಿನ್ನ ದರ್ಶನ
ಹನುಮ ರೂಪನೆ ಗುರುವರೇಣ್ಯನೆ
ಕಷ್ಟ ಕಳೆಯಲು ನೀಡು ದರ್ಶನ
ನಾವು ಋಣಿಗಳು ಲಕ್ಷ್ಮೀ ಮಾತೆಗೆ
ಭರತ ಭೂಮಿಗೆ ನಿನ್ನನಿತ್ತಳು
ಭಕುತ ಸಾಗರ ನಿನ್ನ ನೋಡಲು
ಕಾದು ನಿಂತಿರೆ ಧನ್ಯ ಭಾವದಿ
ಮುಗುದ ಭಕುತಗೆ ಒಂದು ನಿಮಿಷದ
ದೃಷ್ಟಿ ಬೇಕಿದೆ ಪೂತರಾಗಲು
ಹೇ ದಯಾಘನ ಸ್ವಾಮಿ ಬಿಂದುವೆ
ಕಷ್ಟ ಕಳೆಯಲು ನೀಡು ದರ್ಶನ
ನದಿಯ ಮೀನಿಗೆ ಚಳಿಯು ಉಂಟೇ?
ಉರಿವ ಬೆಂಕಿಗೆ ಶಾಖ ತಗುಲಿತೇ?
ಉದಯ ಸೂರ್ಯಗೆ ದೀಪ ದರುಶನ
ಜಗದ ಮಾಯೆಗೆ ನಿನ್ನ ನಾಟಕ
ಸತ್ಯ ಚರಿತನೆ ಕಳಂಕ ರಹಿತನೆ
ನಿತ್ಯ ಶುಧ್ಧನೆ ನಿನಗೆ ಸ್ನಾನವೇ?
ಹೇ ದಯಾಘನ ಸ್ವಾಮಿ ಬಿಂದುವೆ
ಕಷ್ಟ ಕಳೆಯಲು ನೀಡು ದರ್ಶನ
ಜಗದ ಮನುಜರ ಮನವ ಅರಿತು ನೀ
ಶ್ವೇತ ವಸ್ತ್ರವ ಧರಿಸಿ ನಿಂತೆಯಾ?
ರಕ್ತ ಚಂದನ ಎಂಥ ಭೂಷಣ
ಭಸ್ಮ ಭೂಷಿತ ಭುವನ ಸುಂದರ
ಹಣೆಗೆ ಕುಂಕುಮ ನೀನು ಧರಿಸುತ
ಹಣೆಯ ಬರಹವ ನೀನೆ ಬರೆಯುವೆ
ಹೇ ದಯಾಘನ ಸ್ವಾಮಿ ಬಿಂದುವೆ
ಕಷ್ಟ ಕಳೆಯಲು ನೀಡು ದರ್ಶನ
ಶರಧಿ ಲಂಘಿಪ ಮುದ್ದು ಹನುಮನೆ
ಭುವಿಯ ಕ್ರಮಿಸಲು ವಾಯು ಯಾನವೇ
ಜನರ ಕನಸನು ಅರಿವ ಗುರುವಿಗೆ
ನೊಂದ ಭಕುತರ ದೂರು ಕೇಳದೇ?
ಕಪಟ ಆಟದ ಸೂತ್ರದಾರನೆ
ಜಗದ ಮಾಯೆಗೆ ನಿನ್ನ ಪಾತ್ರವು
ಹೇ ದಯಾಘನ ಸ್ವಾಮಿ ಬಿಂದುವೆ
ಕಷ್ಟ ಕಳೆಯಲು ನೀಡು ದರ್ಶನ
ಯೋಗಿ ರಾಜನೆ ಪರಮ ಹಂಸನೆ
ದೂರ ಓಡಿಸು ವಿಷಯ ವಾಸನೆ
ರಾಮ ನಾಮದಿ ನಿರುತ ಪ್ರೇಮವ
ಮನದಿ ನಿಲ್ಲಿಸು ಸರ್ವ ಶಕ್ತನೆ
ಪತಿತ ಪಾವನ ಪರಮ ಪುರುಷನೆ
ಹನುಮ ರೂಪನೆ ರಾಮ ದಾಸನೆ
ಹೇ ದಯಾಘನ ಸ್ವಾಮಿ ಬಿಂದುವೆ
ಕಷ್ಟ ಕಳೆಯಲು ನೀಡು ದರ್ಶನ

0 ಕಾಮೆಂಟ್ಗಳು