|| ಕೃಷ್ಣ ಸ್ತುತಿ ||
ರಾಗ - ಆರಭಿ
ತಾಳ - ಆದಿತಾಳ
ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ||ಪ||
ಮಂಗಳಾಂಗ ಭವಭಂಗ ಬಿಡಿಸಿ ನಿನ್ನ
ಡಿಂಗರಿನ ಮಾಡೋ ಅಂಗಜ ಜನಕ||ಅ ಪ||
ಏಸು ಜನಮದ ಸುಕೃತದ ಫಲವೊ ತಾನು ಜನಿಸಲಾಗಿ
ಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿ
ತೋಷಶಾಸ್ತ್ರಮತ ಚಿನ್ಹಿತನಾಗದೆ ದೋಷಕೆ ಒಳಗಾಗಿ
ಲೇಸು ಸಾಧನವ ಕಾಣದೆ ದುಸ್ಸಹವಾಸದಿಂದಲಿ ದಿನದಿನ ಕಳೆದೆ||೧||
ಶಶಿಮುಖಿ ಕನಕದ ಆಸೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ
ನಿಶಿಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ
ಉಸುರಿದ ನೆಲವೊ ಸರ್ವಕಾಲ ನಿನ್ನೊಡೆತನೆಂಬುವ ಬಗೆಯನು ಅರಿಯದೆ ll 2 ll
ನೆರೆನಂಬಿದ ಪಾವಟಿಕೆಗಳೆಲ್ಲ ಸರಿದು ಪೋದುವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯಂತು ಇಲ್ಲ
ಪರಿಪರಿ ವಿಷಯದ ಆಸೆಯು ಎನಗೆ ಪಿರಿದು ಆಯಿತಲ್ಲ
ಹರಿಯೆ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ ll 3 ll
ಅವನಿಯೊಳಗೆ ಪುಣ್ಯಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲ
ಪವನಾತ್ಮಕ ಗುರು ಮಧ್ವಶಾಸ್ತ್ರದ ಪ್ರವಚನ ಕೇಳಲಿಲ್ಲ
ತವಕದಿಂದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲವಲ್ಲ ll 4 ll
ಭಾಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳ್ದ ಹರಿಕಥೆ ಸಂಯೋಗ ಎಂಬುದಿಲ್ಲ
ನೀಗುವಂಥ ಭವಭಯ ಭಕುತಿ ವೈರಾಗ್ಯವೆಂಬೋದಿಲ್ಲ
ಯೋಗಿವಂದ್ಯ ಗೋಪಾಲವಿಠಲ ತಲೆಬಾಗಿ ನಿನ್ನನೆ ಬೇಡಿಕೊಂಬೆ ll 5 ll
0 ಕಾಮೆಂಟ್ಗಳು