ರಂಗನೊಲಿದ ನಮ್ಮ ಕೃಷ್ಣನೊಲಿದ - Ranganolida Namma Krishnanolida

 || ರಂಗ ಸ್ತುತಿ ||

 ರಚನೆ : ಪುರಂದರದಾಸರು




ರಂಗನೊಲಿದ ನಮ್ಮ ಕೃಷ್ಣನೊಲಿದ ||ಪ||

ಅಂಗನೆ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ||ಅ||


ಕರಿಯ ಪುರದ ನಗರದಲ್ಲಿ ಕೌರವರು ಪಾಂಡವರು

ಧರೆಯ ಒಡ್ಡಿ ಜೂಜನಿಟ್ಟು ಲೆತ್ತವಾಡಲು

ಪರಮಪಾಪಿ ಶಕುನಿ ತಾನು ಪಾಶದೊಳ್ ಪೊಕ್ಕಿರಲು

ಧರ್ಮರಾಯ ಧಾರಿಣಿ ದ್ರೌಪದಿಯ ಸೋತನು ||


ಸೋತನೆಂದು ದುರ್ಯೋಧನ ಸಂತೋಷದಿಂದಲಿ ತನ್ನ

ದೂತರಟ್ಟಿ ಪಾಂಡವರ ಬದುಕು ತರಿಸಿದ

ಜಾತಿ ಮುತ್ತು ಚಿನ್ನ ಬೆಳ್ಳಿ ಆನೆ ಕುದುರೆಗಳ ಸಹಿತ

ಭೀತಿಯಿಲ್ಲದಲೆ ಭಂಡಾರಕಿಟ್ಟನು ||


ಮುದ್ದುಮುಖದ ದ್ರೌಪದಿಯ ಮುಂದೆ ಮಾಡಿ ತನ್ನಿರೆಂದು

ತಿದ್ದಿ ತನ್ನ ಮಾನವರಿಗೆ ತಿಳಿಯಹೇಳಿದ

ಮುದ್ರೆ ಮಾನವರು ಬಂದು ದ್ರೌಪದಿಯ ಮುಂದೆ ನಿಂತು

ಬುದ್ಧಿಯಿಂದಲೆಲ್ಲ ಬಿನ್ನಹ ಮಾಡಲು ||


ಅಮ್ಮ ಕೇಳೆ ಅರಸುಗಳು ಅಚ್ಚಪಗಡೆ ಪಂಥವಾಡಿ

ಹಮ್ಮಲಿಂದ ಜೂಜನಿಟ್ಟು ಲೆತ್ತವಾಡಲು

ಧರ್ಮರಾಯ ಸೋತನೆಂದು ಸತ್ಯವಚನ ಕೌರವಂಗೆ

ನಿಮ್ಮ ಇಂಬು ನಿಲವು ಕರಿಯ ಕೊಟ್ಟರೆಂದರು ||


ಪಟ್ಟಪದವಿ ಅವರಿಗಾಗಿ ಬಡವರಾಗಿ ಇದ್ದೇವೆಂದರೆ

ಕೆಟ್ಟ ಪಗಡೆಪಂಥ ಜೂಜಿನ್ನೆಲ್ಲಿ ಒದಗಿತು

ದುಷ್ಟ ಕೌರವನು ಎನ್ನ ಲಜ್ಜೆ ನಾಚಿಕೆಯ ಕಂಡು

ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ ||


ಬಾಗಿ ಬಳುಕಿ ಬಿಕ್ಕಿ ತನ್ನ ಕಣ್ಣ ನೀರು ಸುರಿವುತಲಿ

ಮಾಗಿಯ ಕೋಕಿಲೆಯಂತೆ ಕಾಯನೊಲವುತ

ಆಗ ಕೃಷ್ಣನಂಘ್ರಿಗಳ ಅಂತರಂಗದಲ್ಲಿ ನೆನೆದು

ಸಾಗಿ ಸಾಗಿ ಹೆಜ್ಜೆಯಿಡುತ ಸಭೆಗೆ ಬಂದಳು ||


ವೀರ ಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತನು

ಕ್ರೂರ ಕೌರವ ದುಶ್ಯಾಸನ ಗುರುಹಿರಿಯರು

ಸಾರುತಿಪ್ಪ ಭಟರು ಪರಿವಾರ ರಾಹುತರ ನೋಡಿ

ಧಾರಿಣಿಗೆ ಮುಖವ ಮಾಡಿ ನಾಚಿ ನಿಂತಳು ||


ಚಂದದಿಂದ ದುರ್ಯೋಧನ ಚದುರೆ ದ್ರೌಪದಿಯ ಕೂಡೆ

ಮುಂದನರಿಯದ ಮುಗುಳುನಗೆಯ ಮಾತನಾಡಿದ

ಹಿಂದೆ ಸ್ವಯಂವರದಲ್ಲಿ ಐವರಿಗೆ ಆದ ಬಾಲೆ

ಇಂದು ಎನ್ನ ಪಟ್ಟದರಸಿಗೊಪ್ಪಿತೆಂದನು ||


ಮಲ್ಲಿಗೆಯ ಮುಡಿಯ ನಾರಿ ಮುದ್ದು ಮುಖದ ವೈಯಾರಿ

ಚಲ್ಲೆಗಂಗಳ ದ್ರೌಪದಿ ಬಾರೆಯೆಂದನು

ಬಿಲ್ಲು ಎತ್ತಲಾರದವನೆ ಭಂಡಾರವ ಕಾದಿದ್ದವನೆ

ಹಲ್ಲು ಕೀಳುವರೈವರು ಬೇಡವೆಂದಳು ||


ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ

ನಿಚ್ಚ ಮುತ್ತಿನಂತೆ ಬಿಂಬಾಧರೆಯೆಂದನು

ಹೆಚ್ಚು ಮಾತನಾಡದಿರೋ ಹೆರರ ಹೆಣ್ಣ ನೋಡದಿರೊ

ನುಚ್ಚು ಮಾಡುವರೈವರು ಬೇಡವೆಂದಳು ||


ಮಟ್ಟಿಬಡಕರೈವರಿಗೆ ಮಡದಿಯಾಗುವುದು ಸಲ್ಲ

ಪಟ್ಟೆಮಂಚಕೊಪ್ಪುವಂತೆ ಬಾರೆಯೆಂದನು

ಕೆಟ್ಟ ಮಾತನಾಡದಿರೋ ಕ್ರೋಧದಿಂದ ನೋಡದಿರೊ

ರಟ್ಟೆ ಕೇಳುವರೈವರು ಬೇಡವೆಂದಳು ||


ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ

ತೊಡೆಯ ಮೇಲೆ ಒಪ್ಪುವಂತೆ ಬಾರೆಯೆಂದನು

ಬೆಡಗು ಮಾತನಾಡದಿರೋ ಭೀಮಸೇನನ ಗದೆಯ ನಿನ್ನ

ತೊಡೆಯ ಮೇಲೆ ಒಪ್ಪುವದು ಬೇಡವೆಂದಳು ||


ಎಷ್ಟು ಬಿಂಕ ಬಡಿವಾರವು ಹೆಣ್ಣು ಬಾಲೆಗಿವಳಿಗೆಷ್ಟು

ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ

ಉಟ್ಟ ಸೀರೆ ಉಡಿಯಲವನ ಉಯಿಕೊ ತೀರಲೆಂದು

ದೃಷ್ಟಿಯಿಂದ ದುಶ್ಶಾಸನಗೆ ಸನ್ನೆಮಾಡಿದ ||


ಮಚ್ಚ ಕೂರ್ಮ ವರಹ ಕಾಯೋ ಮುದ್ದು ನರಸಿಂಹ ಕಾಯೋ

ಹೆಚ್ಚಿನ ವಾಮನನೆ ಕಾಯೊ ಭಾರ್ಗವ ಕಾಯೊ

ಅಚ್ಚ ರಾಮ ಕೃಷ್ಣ ಕಾಯೊ ಬುದ್ಧ ಕಲ್ಕಿ ರೂಪ ಕಾಯೊ

ಸಚ್ಚಿದಾನಂದನೆ ಕಾಯೊ ಸ್ವಾಮಿಯೆಂದಳು ||


ಸಜ್ಜನರ ಪ್ರಿಯ ಕಾಯೊ ಸಾಧುಗಳ ರಕ್ಷಕನೆ ಕಾಯೊ

ನಿರ್ಜರವಂದಿತನೆ ಕಾಯೊ ನರಹರಿ ಕಾಯೊ

ಅರ್ಜುನನ ಸಖನೆ ಕಾಯೊ ಅನಂತಮೂರುತಿ ಕಾಯೊ

ಲಜ್ಜೆ ನಾಚಿಕೆಯ ಕಾಯೊ ಸ್ವಾಮಿಯೆಂದಳು ||


ದುರುಳ ದುಶ್ಯಾಸನನು ಬಂದು ದ್ರೌಪದಿಯ ಮುಂದೆ ನಿಂದು

ಕರವ ಪಿಡಿದು ಸೆರಗ ಹಿಡಿದು ನಿರಿಯ ಸೆಳೆಯಲು

ಮರುಳು ಆಗದಿರೊ ನಿನ್ನ ರಕ್ತದೊಳು ಮುಡಿಯ ಅದ್ದಿ

ಕರುಳು ದಂಡೆಯನೆ ಮಾಡಿ ಮುಡಿವೆನೆಂದಳು ||


ಕಲಹಗಂಟ ಹೆಣ್ಣೆ ನಿನ್ನ ಘಾಸಿ ಮಾಡುವೆನೆಂದು

ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು

ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಿಗೆಯ ಕಿತ್ತು ಎರಡು

ಪಲ್ಲಿನಲ್ಲಿ ಕೇಶನ್ಹಿಕ್ಕಿಕೊಂಬೆನೆಂದಳು ||


ಬೆನ್ನಿನಲ್ಲಿ ಪೆಟ್ಟನಿಕ್ಕಿ ಭಂಡು ಮಾಡುವೆನೆಂದು

ಕನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು

ರನ್ನೆವೀರ ಬೊಬ್ಬೆನಿಕ್ಕಿ ರಭಸದಿಂದ ಸಾರುತಲಿ

ಪನ್ನಗಶಯನ ಕೃಷ್ಣ ಕಾಯೊ ಎಂದಳು ||


ಸಾರಿದವರ ಪೊರೆವ ಕರುಣಿ ಸಾಗರಶಯನ ಕೃಷ್ಣ

ನಾರಿ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು

ಸುರುತಿ ಕಂಭವತಿ ಸಣ್ಣ ಬಣ್ಣ ಸೀರೆಗಳು

ಮೇರುವಿನ ಬೆಟ್ಟದಂತೆ ಮಹಿಮೆ ತೋರಿದ ||


ಹೊಂದಿದವರ ಪೊರೆವ ಕರುಣಿ ಸಿಂಧುಶಯನ ಶ್ರೀ ಕೃಷ್ಣ ನಲ-

ವಿಂದ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು

ಒಂದು ಎರಡು ಮೂರು ನಾಲ್ಕು ಕೋಟಿ ಸಂಖ್ಯೆ ಸೀರೆ ಸುಲಿದು

ನೊಂದು ಬೆಂದು ದುಶ್ಶಾಸನನು ನಾಚಿ ಕುಳಿತನು ||


ನೋಡಿದರು ದ್ರೌಪದಿಯ ಮಾನರಕ್ಷಲೀಲೆಗಳ

ಮಾಡಿದರು ಮಾಧವನ ಮುದ್ದು ಸ್ತೋತ್ರವ

ಮೂಢ ಕೌರವನ ಕೂಡ ಮಾನಿನಿ ದ್ರೌಪದಿಯು ಲೆತ್ತ-

ವಾಡಿ ತನ್ನ ಪತಿಗಳೈವರ ಗೆದ್ದಳು ||


ಕೇಸು ಮುಡಿಯ ಕಟ್ಟಿದಳು ಕೈಯ ಕಾಲ ಮಣ್ಣನೊರೆಸಿ

ಸಾಸಿರನಾಮದ ಒಡೆಯ ಸುರರ ಪಾಲಕ

ವಾಸಿವುಳ್ಳ ಕೃಷ್ಣ ಎನ್ನ ವಹಿಸಿ ಕಾಯಿದಿ ಎಂದು ಸಂ-

ತೋಷದಿಂದ ದ್ರೌಪದಿಯು ಮನೆಗೆ ಬಂದಳು ||


ಭಕ್ತಿಯಿಂದ ದ್ರೌಪದಿಯ ಮಾನರಕ್ಷಲೀಲೆಗಳ

ಯುಕ್ತಿಯಿಂದ ಹಾಡಿ ಪಾಡಿ ಕೇಳುವವರಿಗೆ

ಸಕಲದೋಷಪರಿಹಾರ ಸಂತಾನಫಲಗಳುಂಟು

ಮುಕುತಿ ಕೊಡುವನು ನಮ್ಮ ಪುರಂದರವಿಠಲ ||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು