|| ಹನುಮ ಸ್ತುತಿ ||
ರಚನೆ : ಶ್ರೀ ಬಿಂದುಮಾಧವ ಶರ್ಮಾ ಗುರುಗಳು
ಎಲ್ಲಿ ಹುಡುಕಲೋ ನಮ್ಮ ಚೆಲುವ ಹನುಮನಾ
ನಮ್ಮ ಮುದ್ದು ಹನುಮನಾ ನಾ ಎಲ್ಲಿಹುಡುಕಲೋ|
ಅತ್ತ ಇತ್ತ ಹಾರಿ ಹಾರಿ ಇತ್ತ ಬಂದಾನಾ
ನಮ್ಮತ ಬಂದಾನಾ ನಮ್ಮ ಮುದ್ದು ಹನುಮನಾ॥ಪ||
ಲಂಕೆಯಲ್ಲಿ ಸೀತೆ ಇರವ ಕೇಳಿ ತಿಳಿದಾನಾ
ಜಾಂಬವಂತನಿಂದ ತನ್ನತನವನರಿತಾನಾ।|
ಸೂರ್ಯಚಂದ್ರರನ್ನೇ ಮೀರಿ ಹಾಗೆ ನಿಂತಾನಾ
ಸಾಗರನ್ನೇ ಗೋಷ್ಟದಾಗಿ ಮಾಡಿಬಿಟ್ಟಾನಾ ||೧||
ನಡುವಲೆದ್ದ ಮೈನಾಕನ ಮೆಟ್ಟಿ ನಡೆದಾನಾ
ಸುರಸೆಯನು ಜಾಳಿನಲ್ಲೀ ಎಳೆದು ಹರಿದಾನಾ।
ನೆರಳು ಮಾರಿಯನ್ನು ಸಾರಿ ಹರಿದು ಬಿಸುಟಾನಾ
ಲಂಕೆಯನ್ನುಲೀಲೆಯಿಂದ ಸೇರಿ ನಿಂತಾನಾ ॥2॥
ಅಣುವಿಗಿಂತ ಅಣುವೆ ಆಗಿ ತೋರಿಕೊಂಡಾನಾ
ತಿಂಗಳಲ್ಲಿ ರಾತ್ರಿಯಲ್ಲಿ ಲಂಕೆ ಸೇರ್ದಾನಾ |
ಲಂಕಿಣಿಯನು ಲೆಕ್ಕಿಸುವವನೇ ನಮ್ಮ ಹನುಮನು
ಪುರವ ಸೇರಿ ಸೀತೆ ಇರುವ ತಿಳಿಯ ಹೊರಟಾನಾ ||3||
ಸುತ್ತಲಳೆದು ತಾಯಿ ಕಾಣದಿರಲು ನಂದಾನಾ
ಶೋಕ ನೀಗಲಶೋಕವನಕೆ ಬಂದು ನಿಂತಾನಾ।
ರಾಕ್ಷಸಿಯರೆಲ್ಲಾ ಸುತ್ತ ನಡುವೆ ತಾಯಿ ಸೀತೆ ಇತ್ತ
ಮನದಿ ಹರುಷ ಉಕ್ಕಿ ರಾಮರಾಮ ಅಂದಾನಾ
ಶ್ರೀರಾಮ ಅಂದಾನಾ ಸೀತಾರಾಮ ಅಂದಾನಾ ॥4॥
ರಾಮಚರಿತೆ ಪಾಡಿ ಸೀತೆ ಮನವ ಗೆದ್ದಾನಾ
ಬಳಿಗೆ ಬಂದು ಅಂಗುಲೀಯಕವನು ಇತ್ತಾನಾ |
ರಾಮನಿರವನರುಹಿ ಮತ್ತೆ ಸೀತೆ ಶೋಕ ಇಳಿಸಿ ಬೇಗ
ತಾಯಿಯಿತ್ತ ನೆನಪಿನೊಡನೆ ಮರಳಿ ಹೊರಟಾನಾ ॥5||
ತಾನು ಬರುವ ಮಾರ್ಗ ಮನದೊಳೆಟ್ಟು ನಡೆದಾನಾ
ವನವನಳಿಸಿ ದೈತ್ಯಾಗರವ ಮುರಿದು ನಿಂದಾನಾ |
ಕೋಟಿ ರಾಕ್ಷಸರನು ಕೊಂದು ಶಕ್ತಿ ಮೆರೆದು
ಅಕ್ಷನಾಶ ಮಾಡಿ ರಾವಣನೇ ನಿಜದಿ ಕೆಣಕಿದಾತನಾ ॥6॥
ಎದುರು ಬಂದ ದುಷ್ಟರನ್ನು ಬಿಡದೆ ಸದೆದಾನಾ
ಶೂರನ ಪ್ರಹಸ್ತರನ್ನು ಹಿಡಿದು ತರೆದಾನಾ |
ಇಂದ್ರಜಿತುವಿನೆಲ್ಲಾ ಶಕ್ಕಿ ಇಳಿಸಿ ಮೆರೆದಾನಾ
ಬ್ರಹ್ಮದೇವನಸ್ವವೆಂದು ನಮಿಸಿ ನಿಂದಾನಾ ॥7॥
ಓಲಗದಲಿ ಭೀತಿ ಇಲ್ಲದೆ ರಾಮ ಮಹಿಮೆಯಾ
ಪಾಡಿ ತಾನು ರಾಮದೂತನೆಂದು ನುಡಿದಾನಾ |
ತನಗೂ ಶಿಕ್ಷೆಯಾಗಾಲಿನಿತು ಜಿಂತೆಯಿಲ್ಲದಾನಾ
ಅಗ್ನಿಸ್ಪರ್ಶ ಬಾಲಕಾಗೇ ಹಾರಿಬಿಟ್ಟಾನಾ ॥8॥
ದುಷ್ಟಗೃಹಗಳೆಲ್ಲದಕ್ಕೂಬೆಂಕಿ ಇಟ್ಟಾನಾ...
ಭಕ್ತ ವಿಭೀಷಣನ ಮನೆಯ ಮಾತ್ರ ಬಿಟ್ಟಾನಾ।
ಮತ್ತೆ ತಾಯ ಕಂಡು ಉದದಿ ಹಾರಿ ಬಂದಾನಾ
ಸೀತೆಯಿತ್ತ ಒಡವೆ ರಾಮನಿಗಿತ್ತು ನಲಿದಾನಾ ॥9॥
ಭೀಮಗದೆಯ ಬೀಸಿ ಶತ್ರುನಾಶ ಮಾಡ್ದಾನಾ
ಕೊಟ್ಟ ಭಕ್ಷಭೋಜ್ಯ ತಿಂದು ತೇಗಿದಾತನಾ|
ತರುವಿನಿಂದ ತರುವಿಗಿಳಿದು ನಲಿದು ಭಕ್ತಕೋಟಿಗೊಲಿದು
ಗ್ರಾಮದಿ ಬೆಲಗೂರಿನಲ್ಲಿ ಸುಖದಿ ನಿಂದಾನಾ ||10||
ಎಲ್ಲಿಹುಡುಕಲೋ ನಮ್ಮ ವೀರ ಹನುಮನಾ
ನಮ್ಮಧೀರ ಹನುಮನಾ ನಾ ಎಲ್ಲಿ ಹುಡುಕಲೋ।|
ಸುತ್ತಮುತ್ತ ಹಾರಿಹಾರಿ ಇತ್ತ ಬಂದಾನಾ
ನಮ್ಮತ್ತ ಬಂದಾನಾ ನಮ್ಮ ಮುದ್ದು ಹನುಮನಾ
ನಮ್ಮ ಬಿಂದುಮಾಧವನಾ ||11||
0 ಕಾಮೆಂಟ್ಗಳು