|| ಶ್ರೀನಿವಾಸ ಕಲ್ಯಾಣ ||
ರಚನೆ : ಪುರಂದರದಾಸರು
ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು
ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ।
ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು
ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ ॥೧॥
ಚೋಳಭೃತ್ಯನು ಶಿರವನೊಡೆದ ಗಾಯವ ನೋಡಿ
ತಾಳಲಾರದೆ ಸ್ವಾಮಿ ಗುರುಗಳ ಕರೆಸಿ ।
ಹೇಳಿದೌಷಧ ಮಾಡಿ ಕ್ರೋಢರೂಪಿಯ ಕಂಡು
ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ ॥೨॥
ಇರುತಿರಲು ಒಂದು ದಿನ ತುರಗವನೆ ಸ್ಮರಿಸುತಲಿ
ತುರಗ ಬರಲು ಕಂಡು ಮುದದಿ ತಾನೇರಿ ।
ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು
ಕರುಣಾಸಾಗರ ಒಂದು ವನವ ಕಂಡನು ॥೩॥
ವನದಲ್ಲಿ ವನಜಾಕ್ಷಿ ರಾಜಪುತ್ರಿಯ ಕಂಡು
ಮನಕೆ ಬಂದಂತಾಡಿ ಕಲಹ ಮಾಡಿದರು ।
ಮನಸಿಜಪಿತ ತಾನು ಅಶ್ವವ ಕಳಕೊಂಡು
ಘನವಾದ ಗಿರಿ ಏರಿ ಮಲಗಿದ ಹರಿಯು ॥೪॥
ನಗಧರ ಮಲಗಲು ಬಕುಳಾವತಿಯು ಆಗ
ಬಗೆ ಬಗೆ ಕೇಳಲು ಶೋಕದಿಂ ನುಡಿದ ।
ಗಗನರಾಜನ ಪುತ್ರಿ ಪದ್ಮಾವತಿಯ ಕಂಡು
ಹಗಲು ಇರಳು ಆಕೆಮುಖವ ಸ್ಮರಿಸುವನು ॥೫॥
ಅವಳಿಗೋಸುಗವಾಗಿ ಇದ್ದಲ್ಲಿಗೆ ಪೋದೆ
ಅವಳಿಂದ ಎನ್ನಶ್ವ ಹತವಾಯಿತಮ್ಮ ।
ಅವಳ ಹೊರೆತು ಎನ್ನ ಪ್ರಾಣವೇ ನಿಲ್ಲದು
ಅವಳ ಘಟನೆಯ ನೀನು ಮಾಡಬೇಕಮ್ಮ ॥೬॥
ಅಂದ ಮಾತನು ಕೇಳಿ ಬಕುಳಾವತಿಯು ಆಗ
ಆನಂದದಿಂ ರಾಜಪುರಕೆ ತೆರಳಿದಳು ।
ಸುಂದರಿಯರ ಕಾರ್ಯ ಸ್ಥಿರವಾಗದೆಂದು
ಚೆಂದುಳ್ಳ ಸ್ತ್ರೀರೂಪ ಧರಿಸಿದನು ಹರಿಯು ॥೭॥
ಕೊರವಂಜಿ ತಾನಾಗಿ ನೃಪನ ಪುರಕೆ ಹೋಗಿ
ಧರಣಿದೇವಿಯ ಮುಂದೆ ಶಕುನ ಹೇಳಿದನು ।
ತಿರುಗಿ ಬರಲಾತಗೆ ಮಗಳ ಕೊಡುವೆನೆಂದು
ಹರಿಗೆ ನಿಶ್ಚಯಮಾಡಿ ಶುಕರ ಕಳಿಸಿದನು ॥೮॥
ತಾಪಸೋತ್ತಮ ಬಂದು ಪತ್ರವನೆ ಕೊಡಲು
ಶ್ರೀಪತಿಯು ತಾನೋದಿ ಬೆನ್ಹಿಂದೆ ಬರೆದ ।
ಆ ಪರಮವಂದ್ಯ ತಾ ಸುರಸ್ತೋಮವನೆ ಕರೆಸಿ
ಈ ಪರಿ ವೈಭೋಗ ಮಾಡಿದ ಹರಿಯು ॥೯॥
ಆ ಕ್ಷಣದಲಿ ತಾನು ತರಣಿಯನೆ ಕರೆಸಿ
ಇಕ್ಷುಚಾಪನ ಮಾತೆ ಬಳಿಗೆ ಪೋಗೆಂದ ।
ತಕ್ಷಣದಲಿ ಸೂರ್ಯ ಹೋಗಿ ನಿಲ್ಲಲು ಹರಿಯ
ಅಕ್ಷೇಮವನೆ ಕೇಳಿ ತೆರಳಿದಳು ಬೇಗ ॥೧೦॥
ಬಂದ ಸತಿಯಳ ಕೂಡಿ ಮಂದಿರಕೆ ಪೋಗಿ
ಹಿಂದೆ ಹೇಳಿದ ವಾಕ್ಯ ನಡೆಸೆಂದ ಹರಿಯು ।
ಸಂದೇಹವಿಲ್ಲದೇ ಸ್ವಾಮಿ ನಡೆಸೆಂದು
ಇಂದಿರಾದೇವಿಯು ನುಡಿದಳು ಹರಿಗೆ ॥೧೧॥
ಸ್ವಸ್ತಿವಾಚನ ಮಾಡಿ ಕುಲದೇವರನ್ನಿಟ್ಟು
ಪ್ರಸ್ತವ ಮಾಡಿದ ದ್ವಿಜರ ಸ್ತೋಮಕ್ಕೆ ।
ಮರುದಿನ ಲಕ್ಷ್ಮೀಶ ರಾಜನ ಆ ಪುರಕೆ
ಸುರಸ್ತೋಮವನೆ ಕೂಡಿ ತೆರಳಿ ಬಂದ ॥೧೨ ॥
ಬರುವ ಕೃಷ್ಣನ ಕಂಡು ಶುಕಮುನಿ ಸಂಸ್ತುತಿಸಿ
ಹರಿಗೆ ಭೋಜನವನ್ನು ಮುದದಿ ಮಾಡಿಸಿದ ।
ಆಕಳಂಕ ಮಹಿಮನು ಬಂದ ವಾರ್ತೆಯ ಕೇಳಿ
ಸಕಲ ಜನರ ಕೂಡಿ ಕರೆಯೆ ರಾಜ ॥೧೩॥
ಮುದದಿಂದ ಎದುರುಗೊಂಡು ಪರಿಮಳ ಪೂಸಿ
ಸದಮಲ ಹೃದಯನ ಕರೆತಂದರು ಮನೆಗೆ ।
ಪದ್ಮನಾಭನ ಪೀಠದಲ್ಲಿ ಕುಳ್ಳಿರಿಸಿ
ಮಧುರ ಮಾತಿಲಿ ತನ್ನ ತರುಣಿ ಒಡಗೂಡಿ ॥೧೪॥
ಹೇಮ ಕುಂಭಗಳಿಂದ ದ್ವಿಜರ ಕೈಯೊಳು
ಸ್ವಾಮಿಪುಷ್ಕರಣಿ ತೋಯವನೆ ತರಿಸಿ ।
ಹೇಮತಟ್ಟೆಯಲ್ಲಿ ಸ್ವಾಮಿ ಪಾದವನ್ನಿಟ್ಟು
ಪ್ರೇಮದಿಂದಭಿಷೇಕ ಮಾಡಿದನು ರಾಜ ॥೧೫॥
ಚಿನ್ನದ ಕಿರೀಟ ಆಭರಣವನ್ನಿಟ್ಟು
ಕನ್ಯಾದಾನವ ಮಾಡಿ ಧನ್ಯನಾದ ।
ತನ್ನ ಮಗಳನೆ ಶ್ರೀನಿವಾಸಗೆ ಒಪ್ಪಿಸಿ
ಉನ್ನತ ಪದವಿಯ ಚೆನ್ನಾಗಿ ಪಡೆದ ॥೧೬॥
ಮಾವನಪ್ಪಣೆಗೊಂಡು ಮೈದಗೊಸ್ತ್ರವ ಕೊಟ್ಟು
ಭಾವಶುದ್ದದಿ ತನ್ನ ಮಾವಗೊಂದಿಸಿದ ।
ಯಾವಾಗ ಕರೆದರೂ ಬರುವೆನು ನಾನೆಂದು
ಪಾವನ್ನ ಮಾಡೆಂದು ಧರಣೀಗೊಂದಿಸಿದ ॥೧೭॥
ಅಷ್ಟಗೋಪುರ ಏರಿ ಕಣ್ಣಿಟ್ಟು ನೋಡುತಲಿ
ಎಷ್ಟು ಹೇಳುವುದೀಕೆ ಸುಕೃತಫಲವೆನಲು ।
ಅಜ ರುದ್ರ ಮೊದಲಾದ ಸುರರು ದ್ವಿಜರೆಲ್ಲ
ಸುಜನರಂದಣವೇರಿ ಪುರಕೆ ಸಾಗಿದರು ॥೧೮॥
ಆರು ತಿಂಗಳು ಮೀರಿ ಗಿರಿಗೆ ಪೋಗುವೆನೆಂದು
ಧೀರ ತಾ ನಿಂತಾನೆ ಕುಂಭಜರಾಶ್ರಮದಿ ।
ಧರೆಯೊಳು ಅಣಕೇರಿ ಸುರಪತಿ ಪ್ರಿಯನಾದ
ಸುಗುಣವೇಂಕಟರನ್ನ ಪುರಂದರವಿಠಲ ॥೧೯॥

0 ಕಾಮೆಂಟ್ಗಳು