ಶ್ರೀ ವೆಂಕಟೇಶ ಸ್ತವರಾಜ - Sri Venkatesha Stavaraja

|| ಶ್ರೀ ವೆಂಕಟೇಶ ಸ್ತವರಾಜ ||





ಶ್ರೀರಮಣ ಸರ್ವೇಶ ಸರ್ವಗ

ಸಾರಭೋಕ್ತ ಸ್ವತಂತ್ರ ಸರ್ವದs

ಪಾರಮಹಿಮೋದಾರ ಸದ್ಗುಣಪೂರ್ಣಗಂಭೀರ |

ಸಾರಿದವರಘ ದೂರಗೈಸೀ

ಸೂರಿಜನರಿಗೆ ಸೌಖ್ಯನೀಡುವ

ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ||೨||


ಘನ್ನಮಹಿಮಾಪನ್ನ ಪಾಲಕ

ನಿನ್ನ ಹೊರತಿನ್ನನ್ಯ ದೇವರ

ಮನ್ನದಲಿನ ನಾ ನೆನೆಸೆನೆಂದಿಗೂ ಬನ್ನ ಬಡಿಸದಿರೂ |

ಎನ್ನ ಪಾಲಕ ನೀನೆ ಇರುತಿರೆ

ಇನ್ನು ಭವಭಯವೇಕೆ ಎನಗೆ

ಚನ್ನವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ||೨||


ಲಕುಮಿ ಬೊಮ್ಮ ಭವಾಮರೇಶರು

ಭಕುತಿಪೂರ್ವಕ ನಿನ್ನ ಭಜಿಸೀ

ಸಕಲಲೋಕಕೆ ನಾಥನೆನಿಪರೊ ಸರ್ವಕಾಲದಲಿ |

ನಿಖಿಳಜೀವರ ಪೊರೆವೊ ದೇವನೆ

ಭಕುತಿ ನೀಯೆನಗೀಯದಿರಲು

ವ್ಯಕುತವಾಗ್ಯಪಕೀರ್ತಿ ಬಪ್ಪುದೊ ಶ್ರೀನಿಕೇತನನೆ||೩||


ಯಾಕೆ ಪುಟ್ಟದೊ ಕರುಣ ಎನ್ನೊಳು

ಸಾಕಲಾರೆಯ ನಿನ್ನ ಶರಣನ

ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ|

ನೋಕನೀಯನೇ ನೀನೆ ಎನ್ನನು

ಜೋಕೆಯಿಂದಲಿ ಕಾಯೊ ಬಿಡದೆ

ಏಕದೇವನು ನೀನೆ ವೇಂಕಟ ಶೇಷಗಿರಿವಾಸ ||೪||


ಅಂಬುಜಾಂಬಕ ನಿನ್ನ ಪದಯುಗ

ನಂಬಿಕೊಂಡೀ ಪರಿಯಲಿರುತಿರೆ

ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿತೋರೆ |

ಬಿಂಬಮೂರುತಿ ನಿನ್ನ ಕರಗತ

ಕಂಬುವರವೇ ಗತಿಯೊ ವಿಶ್ವ

ಕುಟುಂಬಿ ಎನ್ನನು ಸಲಹೊ ಸಂತತ ಶೇಷಗಿರಿವಾಸ||೫||



ಸಾರಶಿರಿವೈಕುಂಠ ತ್ಯಜಿಸೀ

ಧಾರುಣೀಯೊಳು ಗೊಲ್ಲನಾಗಿ

ಚೋರಕರ್ಮವ ಮಾಡಿ ಬದುಕಿದ ದಾರಿಗರಿಕಿಲ್ಲ |

ಸಾರಿಪೇಳುವೆ ನಿನ್ನ ಗುಣಗಳ

ಪಾರವಾಗಿರುತಿಹವೊ ಜನರಿಗೆ

ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ||೬||


ನೀರ ಮುಳುಗೀ ಭಾರಪೊತ್ತೂ

ಧಾರುಣೀತಳವಗೆದು ಸಿಟ್ಟಿಲಿ

ಕ್ರೂರನುದರವ ಶೀಳಿ ಕರುಳಿನ ಮಾಲೆ ಧರಿಸಿದರು |

ಪೋರ ವಿಪ್ರ ಕುಠಾರಿ ವನವನ

ಚಾರಿ ಗೋಪ ದಿಗಂಬರಾಶ್ವವ

ಏರಿ ಪೋದರು ಬಿಡೆನೊ ವೇಂಕಟಶೇಷಗಿರಿವಾಸ||೭||


ಲಕ್ಷ್ಮಿನಾಯಕ ಸಾರ್ವಭೌಮನೆ

ಪಕ್ಷಿವಾಹನ ಪರಮಪುರುಷನೆ

ಮೋಕ್ಷದಾಯಕ ಪ್ರಾಣಜನಕನೆ ವಿಶ್ವವ್ಯಾಪಕನೆ |

ಅಕ್ಷಯಾಂಬರವಿತ್ತಿ ವಿಜಯನ

ಪಕ್ಷಪಾತವ ಮಾಡಿ ಕುರುಗಳ

ಲಕ್ಷ್ಯಮಾಡದೆ ಕೊಂದೆಯೋ ಶ್ರೀಶೇಷಗಿರಿವಾಸ ||೮||


ಹಿಂದೆ ನೀ ಪ್ರಹ್ಲಾದ ಗೋಸುಗ

ಎಂದು ನೋಡದ ರೂಪಧರಿಸೀ

ಬಂದು ದೈತ್ಯನ ಒಡಲ ಬಗೆದೂ ಪೊರೆದೆ ಬಾಲಕನ |

ತಂದೆತಾಯ್ಗಳ ಬಿಟ್ಟು ವಿಪಿನದಿ

ನಿಂದು ತಪಿಸುವ ಪಂಚವತ್ಸರ

ಕಂದನಾ ಧ್ರುವಗೊಲಿದು ಪೊರೆದೆಯೋ ಶೇಷಗಿರಿವಾಸ||೯||


ಮಡುವಿನೊಳಗಿಹ ಮಕರಿಕಾಲನು

ಪಿಡಿದು ಬಾಧಿಸೆ ಕರಿಯು ತ್ರಿಜಗ

ದ್ವಡೆಯ ಪಾಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ |

ಮಡದಿಮಾತನು ಕೇಳಿ ಬಲುಪರಿ

ಬಡವಬ್ರಾಹ್ಮಣ ಧಾನ್ಯಕೊಡಲು

ಪೊಡವಿಗಸದಳ ಭಾಗ್ಯ ನೀಡಿದೆ ಶೇಷಗಿರಿವಾಸ||೧೦||


ಪಿಂತೆಮಾಡಿದ ಮಹಿಮೆಗಳ ನಾ

ನೆಂತು ವರ್ಣಿಸಲೇನುಫಲ ಶ್ರೀ

ಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ |

ಕಂತುಜನಕನೆ ಎನ್ನ ಮನಸಿನ

ಅಂತರಂಗದಿ ನೀನೆ ಸರ್ವದ

ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ||೧೧||


ಶ್ರೀನಿವಾಸನೆ ಭಕ್ತಪೋಷನೆ

ಜ್ಞಾನಿಕುಲಗಳಿಗಭಯದಾಯಕ

ದೀನಬಾಂಧವ ನೀನೆ ಎನ್ನಮನದರ್ಥ ಪೂರೈಸೊ |

ಅನುಪಮೋಪಮಜ್ಞಾನ ಸಂಪದ

ವಿನಯಪೂರ್ವಕವಿತ್ತು ಪಾಲಿಸೊ

ಜನುಮಜನುಮಕೆ ಮರೆಯಬೇಡವೋ ಶೇಷಗಿರಿವಾಸ||೧೨||


ಮದವು ಮತ್ಸರ ಲೋಭ ಮೋಹವು

ಒದಗಬಾರದು ಎನ್ನ ಮನದಲಿ

ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು |

ಹೃದಯಮಧ್ಯದಿ ನಿನ್ನ ರೂಪವು

ವದನದಲಿ ತವ ನಾಮಮಂತ್ರವು

ಸದಯ ಪಾಲಿಸೊ ಬೇಡಿಕೊಂಬೆನೊ ಶೇಷಗಿರಿವಾಸ||೧೩||


ಅಂದನುಡಿ ಪುಸಿಯಾಗಬಾರದು

ಬಂದ ಭಾಗ್ಯವು ಹೋಗಬಾರದು

ಕುಂದು ಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ |

ನಿಂದೆ ಮಾಡುವ ಜನರ ಸಂಗವು

ಎಂದಿಗಾದರು ದೊರೆಯ ಬಾರದು

ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ||೧೪||


ಏನು ಬೇಡಲಿ ಎನ್ನ ದೇವನೆ

ಸಾನುರಾಗದಿ ಎನ್ನ ಪಾಲಿಸೊ

ನಾನಾವಿಧವಿಧ ಸೌಖ್ಯ ನೀಡು ಇಹಪರಂಗಳಲಿ |

ಶ್ರೀನಿವಾಸನೆ ನಿನ್ನ ದಾಸಗೆ

ಏನುಕೊರೆತಿಲ್ಲೆಲ್ಲಿ ನೋಡಲು

ನೀನೆ ನಿಂತೀವಿಧದಿ ಪೇಳಿಸು ಶೇಷಗಿರಿವಾಸ ||೧೫||


ಆರುಮುನಿದವರೇನು ಮಾಳ್ಪರೊ

ಆರುವೊಲಿದವರೇನು ಮಾಳ್ಪರೊ

ಆರು ಸ್ನೇಹಿಗರಾರು ದ್ವೇಷಿಗಳಾರುದಾಶಿನರು |

ಕ್ರೂರ ಜೀವರ ಹಣಿದು ಸಾತ್ವಿಕ

ಧೀರ ಜೀವರ ಪೊರೆದು ನಿನ್ನಲಿ

ಸಾರ ಭಕುತಿಯನಿತ್ತುಪಾಲಿಸೋ ಶೇಷಗಿರಿವಾಸ || ೧೬ ||


ನಿನ್ನ ಸೇವೆಯನಿತ್ತು ಎನಗೇ

ನಿನ್ನ ಪದಯುಗ ಭಕ್ತಿ ನೀಡೀ

ನಿನ್ನ ಗುಣ ಗಣ ಸ್ತವನ ಮಾಡುವ ಜ್ಞಾನ ನೀನಿತ್ತು |

ಎನ್ನ ಮನದಲಿ ನೀನೆ ನಿಂತೂ

ಘನ್ನ ಕಾರ್ಯವ ಮಾಡಿ ಮಾಡಿಸು

ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || ೧೭ ||

ಜಯ ಜಯತು ಶಠ ಕೂರ್ಮ ರೂಪನೆ

ಜಯ ಜಯತು ಕಿಟಿ ಸಿಂಹ ವಾಮನ

ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ |

ಜಯ ಜಯತು ಶಿರಿ ಯದುವರೇಣ್ಯನೆ

ಜಯ ಜಯತು ಜನಮೋಹ ಬುದ್ಧನೆ

ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ || ೧೮ ||


ಕರುಣ ಸಾಗರ ನೀನೆ ನಿಜಪದ

ಶರಣವತ್ಸಲ ನೀನೆ ಶಾಶ್ವತ

ಶರಣಜನ ಮಂದಾರ ಕಮಲಾಕಾಂತ ಜಯವಂತ |

ನಿರುತ ನಿನ್ನನು ನುತಿಸಿ ಪೇಡುವೆ

ವರದ ಗುರುಜಗನ್ನಾಥವಿಠ್ಠಲ

ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ||೧೯||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು