|| ಹರಿ ಭಜನೆ ||
ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ ಕಾಯೊ ಗೋವಿಂದ ||ಪ||
ಹೆಸರುಳ್ಳ ನದಿಗಳನೊಳಗೊಂಬ ಸಮುದ್ರನು
ಬಿಸುಡುವನೆ ಕಾಲುಹೊಳೆಗಳನು ಗೊವಿಂದ ||೧||
ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆ
ಬಂಧನ ಬಿಡಿಸೆನ್ನ ತಂದೆ ಗೋವಿಂದ ||೨||
ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||೩||
ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಓಲೈಸಲ್ಯಾಕೆ ಗೋವಿಂದ ||೪||
ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ
ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ||೫||
ಅರಸು ಮುಟ್ಟಲು ದಾಸಿ ರಂಭೆಯಾದಳು ದೇವ
ಪರುಷ ಮುಟ್ಟಲು ಲೋಹ ಹೊನ್ನು ಗೋವಿಂದ ||೬||
ಮಾನಾಭಿಮಾನದೊಡೆಯ ರಂಗವಿಠಲ
ಜ್ಞಾನಿಗಳರಸನೆ ಕಾಯೋ ಗೋವಿಂದ ||೭||
0 ಕಾಮೆಂಟ್ಗಳು