|| ಶ್ರೀರಾಮ ಸ್ತುತಿ ||
ರಚನೆ ~ ವಿಜಯಲಕ್ಷ್ಮಿ ಮಳಿಯೆ ರವರು
ಅಯೋಧ್ಯಾ ನಗರದಿಂದ
ಶ್ರೀರಾಮಚಂದ್ರ ಅಶ್ವತ್ಥಪುರಕೆ ಬಂದ ||ಪ||
ನಮ್ಮ ದೇಶಸ್ಥ ಸಮಾಜದ ಕೆಲವು ಹಿರಿಯರು|
ಗೋಂದಾವಲಿ ಮಹಾರಾಜರ ಬೇಡಿಕೊಂಡರು||
ಶ್ರೀರಾಮನ ಮಂದಿರವನು ಸ್ಥಾಪಿಸಿ ಎಂದರು|
ಮಹಾರಾಜರಾಣತಿಯಂತೆ ಕರೆತರಲು ಬ್ರಹ್ಮಾನಂದರು ||೧||
ಶ್ರೀರಾಮನಿಗಿಲ್ಲಿ ಭವ್ಯ ಮಂದಿರವಿರುವುದು|
ಸಾಕೇತದರಮನೆಯಾ ಹೋಲುತಲಿಹುದು||
ಸೀತಾ ಲಕ್ಷ್ಮಣ ಹನುಮರೆಲ್ಲರು ರಾಮನ ಜೊತೆಗೂಡಿರಲು|
ಅಶ್ವತ್ಥಪುರವು ಭೂ ವೈಕುಂಠವಾಗಿ ತೋರುತಿರಲು ||೨||
ಚೈತ್ರಶುದ್ಧ ಪಾಡ್ಯದಿ ಹನುಮ ಧ್ವಜ ಸ್ತಂಭವೇರಿ|
ರಾಮಭಕ್ತರೆಲ್ಲರಿಗೂ ಮಾರ್ಗವ ತೋರಿ||
ಎನ್ನ ಪ್ರಭು ಶ್ರೀರಾಮನುತ್ಸವವು ನಡೆದಿಹುದು|
ನೀವೂ ಬನ್ನಿ ರಾಮಕೃಪೆಗೆ ಪಾತ್ರರಾಗಿ ಎಂದಂತಿಹುದು||೩||
ರಾಮರಾಯ ತನ್ನ ಪರಿವಾರದೊಂದಿಗೆ|
ದಿನಕೊಂದು ವಾಹನವೇರಲು ಬರುವುದು ಮೆರವಣಿಗೆ||
ನವಮಿಯಂದು ಪುನಃ ರಾಮ ನವ ಶಿಶುವಾಗಿ|
ನಮ್ಮೆಲ್ಲರ ತಾ ಮಾಡುವ ಕೌಸಲ್ಯೆಯರಾಗಿ ||೪||
ದಶಮಿಯ ದಿನ ರಥೋತ್ಸವದ ವೈಭವ ನೋಡಲು|
ಮುಕ್ಕೋಟಿ ದೇವತೆಗಳು ಈ ಧರೆಗಿಳಿಯಲು||
ಸರಯೂ ನದಿ ತಾನು ಭಕ್ತಿಸುಧೆಯಾಗಿ ಹರಿಯಲು |
ಪಟ್ಟಾಭಿರಾಮನಾಗಿ ನಿಲುವ ಭಕ್ತಜನರ ಹರಸಲು ||೫||

0 ಕಾಮೆಂಟ್ಗಳು